ಹೈಲೈಟ್ಸ್:
- ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022 ರಲ್ಲಿ ರಾಜ್ಯ 10,061 ಕೋಟಿ ಜಿಎಸ್ಟಿ ಸಂಗ್ರಹ ಮಾಡಿದರೆ 2023 ರಲ್ಲಿ 11,759 ಕೋಟಿ ಸಂಗ್ರಹ ಮಾಡಿದೆ
- 14 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಶೇ. 4.71 ರಷ್ಟು ಪಾಲು ನೀಡಲಾಗಿತ್ತು. ಆದರೆ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ. 3.64ಕ್ಕೆ ಇಳಿಕೆಯಾಗಿದೆ
- ಈ ಹಿನ್ನಲೆಯಲ್ಲಿ ಡಿ ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಮಹತ್ವ ಪಡೆದುಕೊಳ್ಳುತ್ತದೆ ಎಂದೂ ಚರ್ಚೆ ನಡೆಯುತ್ತಿದೆ
- ಅಷ್ಟಕ್ಕೂ ಡಿಕೆ ಸುರೇಶ್ ಏನು ಹೇಳಿದ್ದರು?
- ದೆಹಲಿಯಲ್ಲಿ ಗುರುವಾರ ಮಾತನಾಡಿದ್ದ ಡಿಕೆ ಸುರೇಶ್ ‘ದಕ್ಷಿಣ ಭಾರತದ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ. ಹೀಗಾಗಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾಗುತ್ತದೆ ಮತ್ತು ಮುಂದೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಲಿವೆ’ ಎಂದು ಹೇಳಿದ್ದರು.
ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022 ರಲ್ಲಿ ರಾಜ್ಯ 10,061 ಕೋಟಿ ಜಿಎಸ್ಟಿ ಸಂಗ್ರಹ ಮಾಡಿದರೆ, 2023 ರಲ್ಲಿ 11,759 ಕೋಟಿ ಸಂಗ್ರಹ ಮಾಡಿದೆ. ಇನ್ನು ತಮಿಳು ನಾಡು 2022 ರಲ್ಲಿ 8,324 ಕೋಟಿ ಸಂಗ್ರಹ ಮಾಡಿದರೆ, 2023 ರಲ್ಲಿ 9,888 ಕೋಟಿ ಸಂಗ್ರಹ ಮಾಡಿದೆ. ತೆಲಂಗಾಣ 2022 ರಲ್ಲಿ 4,178 ಕೋಟಿ ಹಾಗೂ 2023 ರಲ್ಲಿ 4,753 ಕೋಟಿ ಸಂಗ್ರಹ ಮಾಡಿದೆ. ಆದರೆ ಉತ್ತರದ ರಾಜ್ಯಗಳು ಜಿಎಸ್ಟಿ ಸಂಗ್ರಹದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿಲ್ಲ ಎಂಬುವುದು ಪ್ರಮುಖ ಅಂಶವಾಗಿದೆ.
14 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಶೇ. 4.71 ರಷ್ಟು ಪಾಲು ನೀಡಲಾಗಿತ್ತು. ಆದರೆ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ. 3.64ಕ್ಕೆ ಇಳಿಕೆಯಾಗಿದೆ. ಇದರಿಂದ ಮೂರು ವರ್ಷಗಳಲ್ಲಿ ಕರ್ನಾಟಕಕ್ಕೆ 26,140 ಕೋಟಿ ಕೊರತೆಯಾಗಿದೆ ಎಂಬುವುದು ಸಿದ್ದರಾಮಯ್ಯ ಸರ್ಕಾರದ ವಾದವಾಗಿದೆ.
ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಹಾಗೂ ತೆರಿಗೆಯ ಶೇ. 30 ರಷ್ಟು ಮೊತ್ತ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಸಂಗ್ರಹವಾಗುತ್ತಿದೆ. ಆದರೆ ತೆರಿಗೆ ಪಾಲು ನೀಡುವಾಗ ಉತ್ತರ ಪ್ರದೇಶ, ಬಿಹಾರ ಹಾಗೂ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ. ಇದಕ್ಕೆ ರಾಜ್ಯವಾರು ಸಂಗ್ರಹವಾಗುವ ತೆರಿಗೆ ಪಾಲಿನ ಹಂಚಿಕೆ ಮಾಡುವ ಸಂದರ್ಭದಲ್ಲಿ ಜನಸಂಖ್ಯೆ, ಹಿಂದುಳಿದಿರುವಿಕೆ ವಿಧಾನವನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದೇ ಕಾರಣ ಎಂಬುವುದು ದಕ್ಷಿಣದ ವಾದವಾಗಿದೆ.
ಅಷ್ಟಕ್ಕೂ ಉತ್ತರ ಪ್ರದೇಶ 2022 ರಲ್ಲಿ 7,178 ಜಿಎಸ್ಟಿ ಸಂಗ್ರಹ ಮಾಡಿದರೆ, 2023 ರಲ್ಲಿ 8,011 ಕೋಟಿ ಸಂಗ್ರಹ ಮಾಡಿದೆ. ಬಿಹಾರ 2022 ರಲ್ಲಿ 1,309 ಕೋಟಿ ಸಂಗ್ರಹ ಮಾಡಿದರೆ, 2023 ರಲ್ಲಿ 1487 ಕೋಟಿಯಷ್ಟೇ ಸಂಗ್ರಹ ಮಾಡಿದೆ. ಇನ್ನು ಹರಿಯಾಣದ ಪಾಲು 2022 ರಲ್ಲಿ 6,678, 2023 ರಲ್ಲಿ 8,130 ಕೋಟಿ ಇದೆ.
ವಿಶೇಷ ಕೋಶ ರಚಿಸಲು ಸರ್ಕಾರ ನಿರ್ಧಾರ
ಇನ್ನು ದಕ್ಷಿಣದ ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿ ತಮ್ಮ ನ್ಯಾಯಯುತ ಹಕ್ಕನ್ನು ಪಡೆದುಕೊಳ್ಳಲು ಹಣಕಾಸು ಆಯೋಗದ ಮುಂದೆ ಸಮರ್ಥವಾದ ವಾದ ಮಂಡಿಸುವ ನಿಟ್ಟಿನಲ್ಲಿ
ವಿಶೇಷ ಕೋಶವನ್ನು ರಚಿಸಲು ಸಿಎಂ ಸಿದ್ದರಾಮಯ್ಯ ಈಗಾಗಲೇ ನಿರ್ದೇಶನ ನೀಡಿದ್ದಾರೆ. ತೆರಿಗೆ ಪಾಲಿನ ಹಂಚಿಕೆಯಲ್ಲಿ ಅನ್ಯಾಯಕ್ಕೊಳಗಾದ ಇತರ ರಾಜ್ಯಗಳನ್ನು ಒಟ್ಟು ಸೇರಿಸಿ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ಹೇಳಿಕೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರದ ನಿಲುವಿನ ಹಿನ್ನಲೆಯಲ್ಲಿ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಕುರಿತಾಗಿ ಧ್ವನಿ ಎತ್ತಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ಪರೋಕ್ಷವಾಗಿ ಸಮರ್ಥನೆ ನೀಡುತ್ತಿದ್ದರೆ, ಬಿಜೆಪಿ ತೀವ್ರವಾಗಿ ವಿರೋಧ ಮಾಡುತ್ತಿದೆ.


